ಸಾವಿನ ಮೆರವಣಿಗೆ ಮತ್ತೆ ಬೇಡ ಓಮಿಕ್ರಾನ್ ಬಗ್ಗೆ ರಾಜ್ಯದ ಜನತೆ ಎಚ್ಚರದಿಂದಿರಿ: ಎಚ್‍ಡಿಕೆ

ಸಾವಿನ ಮೆರವಣಿಗೆ ಮತ್ತೆ ಬೇಡ ಓಮಿಕ್ರಾನ್ ಬಗ್ಗೆ ರಾಜ್ಯದ ಜನತೆ ಎಚ್ಚರದಿಂದಿರಿ: ಎಚ್‍ಡಿಕೆ

ಬೆಂಗಳೂರು: ವಿಶ್ವದಾದ್ಯಂತ ಕಳವಳ ಮೂಡಿಸಿರುವ ಕೊರೊನಾ ಹೊಸ ತಳಿ ಓಮಿಕ್ರಾನ್ ಬಗ್ಗೆ ರಾಜ್ಯದ ಜನತೆ ಎಚ್ಚರದಿಂದ ಇರಬೇಕೆಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವಿಟ್ಟರ್ ಮೂಲಕ ಮನವಿ ಮಾಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?:
ಕೋವಿಡ್-19 ಮೊದಲ ಅಲೆಯ ಆತಂಕ, ಎರಡನೇ ಅಲೆ ಸೃಷ್ಟಿಸಿದ ನರಕಯಾತನೆ ಎಂಥದ್ದು ಎಂದು ನಾವೆಲ್ಲ ಕಂಡು, ಅನುಭವಿಸಿದ್ದೇವೆ. ಆಸ್ಪತ್ರೆಯಲ್ಲಿ ಬೆಡ್ ಸಿಗದೇ, ಬದುಕುಳಿಯಲು ಪ್ರಾಣವಾಯುವೂ ಸಿಗದೇ ಉಸಿರು ಚೆಲ್ಲಿದ ಜೀವಗಳನ್ನು ನೆನೆಸಿಕೊಂಡರೆ ಕಣ್ಣುಗಳ ಕಟ್ಟೆಯೊಡೆಯುತ್ತದೆ. ಅಂಥ ಸಾವಿನ ಮೆರವಣಿಗೆ ಮತ್ತೆ ಬೇಡ. ಯಾರೂ ಎಚ್ಚರ ತಪ್ಪುವುದು ಬೇಡ. ಕೊರೊನಾ ಹೊಸ ತಳಿ ಓಮಿಕ್ರಾನ್ 30ಕ್ಕೂ ಹೆಚ್ಚು ರೂಪಾಂತರ ಹೊಂದಿರುವ ವರದಿ ಇದೆ. ಭಾರತವೂ ಸೇರಿ ಜಗತ್ತಿನ ವಿವಿಧ ದೇಶಗಳಲ್ಲಿ ಮಾರಕ ಮಾರಿ ಪುನಃ ಅಬ್ಬರಿಸುತ್ತಿದೆ. ಕೇಂದ್ರ ಸರ್ಕಾರ, ಏಮ್ಸ್ ವೈದ್ಯರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. 

ಎಲ್ಲೆಡೆ ಕೆನ್ನಾಲಗೆ ಚಾಚಿರುವ ಕೊರೊನಾ ಹೊಸ ತಳಿಯನ್ನೆದುರಿಸಲು ನಮಗೊಂದಿಷ್ಟು ತಾಳ್ಮೆ ಬೇಕಿದೆ. ಕೊರೊನ ಶಿಷ್ಟಾಚಾರ ಪಾಲಿಸೋಣ. ಮಾಸ್ಕ್, ಸ್ಯಾನಿಟೈಸ್, ದೈಹಿಕ ಅಂತರ ಪಾಲನೆ ಮಹಾಮಾರಿ ನಿಯಂತ್ರಣಕ್ಕಿರುವ ಸರಳಸೂತ್ರಗಳು. ಅಗತ್ಯವಿದ್ದರೆ ಓಡಾಡಿ. ಹೊರಗೆ ಬಂದಾಗ ಮುನ್ನೆಚ್ಚರಿಕೆ ಜೊತೆಗೆ, ಇನ್ನೊಬ್ಬರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಯಾವ ಕಾರಣಕ್ಕೂ ಮತ್ತೊಂದು ಸಾವಿನ ಅಲೆಗೆ ಅವಕಾಶ ಕೊಡುವುದು ಬೇಡ. ಇದು ನನ್ನ ವಿನಮ್ರ ಪ್ರಾರ್ಥನೆ ಎಂದು ಮನವಿ ಮಾಡಿದ್ದಾರೆ. 

Comments