ಜೆಡಿಎಸ್ನಲ್ಲಿ ಗುರುತಿಸಿಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದ ಜಿಟಿ ದೇವೇಗೌಡ ಅವರ ಪುತ್ರನಿಗೆ ಬಿಜೆಪಿಯಿಂದ ಟಿಕೆಟ್ ನೀಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ರಾಜ್ಯದಲ್ಲಿ ಉಪಚುನಾವಣೆ ಕಾವು ಜೋರಾಗಿದೆ, ಒಟ್ಟು 15 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಯಾವ ಕ್ಷೇತ್ರದಲ್ಲಿ ಯಾರು ನಿಲ್ಲಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿದೆ. ಇನ್ನೂ ಅನರ್ಹ ಶಾಸಕರ ಅರ್ಜಿ ವಿಚಾರಣೆ ಬಾಕಿ ಇದ್ದು ಸುಪ್ರೀಂಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ತವಿದೆ ಎನ್ನಲಾಗಿದೆ. ಈ ಸಂಬಂಧ ಇನ್ನೂ ಗೊಂದಲಗಳು ಬಗೆಹರಿದಿಲ್ಲ.
ಅದರಲ್ಲೂ ಮೈಸೂರಿನ ಹುಣಸೂರು ಕ್ಷೇತ್ರದಲ್ಲಿ ಚುನಾವಣೆ ಕಾವು ನಿಧಾನವಾಗಿ ಏರುತ್ತಿದೆ. ಕಾಂಗ್ರೆಸ್ಸಿನಿಂದ ಅಭ್ಯರ್ಥಿ ಪಕ್ಕಾ ಆಗಿದೆ. ಆದರೆ ಬಿಜೆಪಿ, ಜೆಡಿಎಸ್ನಿಂದ ಯಾರು ಕಣಕ್ಕಿಳಿಯುತ್ತಾರೆ ಎಂಬ ಕುತೂಹಲ ಹುಟ್ಟಿಸಿದೆ ಎಂದು ಹೇಳಲಾಗಿದೆ. ಸರ್ಕಾರ ಬೀಳುತ್ತಿದ್ದಂತೆ ಹಲವು ಶಾಸಕರ ಆಲೋಚನೆಗಳೇ ಬೇರೆ ದಿಕ್ಕಿನೆಡೆಗೆ ಸಾಗಿದೆ ಎನ್ನಲಾಗಿದೆ. ಚುನಾವಣಾ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಿದ್ದ ಜಿಟಿ ದೇವೇಗೌಡ ಇದೀಗ ತಮ್ಮ ಮಗನನ್ನು ಕಣಕ್ಕಿಳಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಗನನ್ನು ಯಾವುದೇ ಕಾರಣಕ್ಕೂ ಹುಣಸೂರಿನಿಂದ ನಿಲ್ಲಿಸಲ್ಲ ಎಂದು ಹೇಳಿದ್ದರು. ಆದರೆ ಈಗ ಅವರೇ ತಮ್ಮ ಪುತ್ರನನ್ನು ಕಣಕ್ಕಿಳಿಸುತ್ತಿದ್ದಾರೆ ಎಂದರೆ ಅವರ ಮಾತಲ್ಲಿ ಎಷ್ಟು ಸತ್ಯವಿತ್ತು ಎನ್ನುವುದನ್ನೂ ಗಮನಿಸಬೇಕಿದೆ. ಹುಣಸೂರು ಕ್ಷೇತ್ರದಲ್ಲಿ ಜಿಟಿಡಿ ಪುತ್ರ ಹರೀಶ್ಗೌಡ ಅವರ ಸಂಘಟನೆ ಇದೆ. ಜಿ.ಟಿ.ದೇವೇಗೌಡರಿಗೂ ಕ್ಷೇತ್ರದ ಮೇಲೆ ಹಿಡಿತವಿದೆ. ಅಪ್ಪ-ಮಕ್ಕಳಿಗೆ ಒಕ್ಕಲಿಗ ಮತಗಳನ್ನು ಛಿದ್ರ ಮಾಡುವ ಶಕ್ತಿ ಇದೆ. ಹಾಗೆಯೇ ಲಿಂಗಾಯತ, ಎಸ್ಸಿ, ಎಸ್ಟಿ ಮತಗಳನ್ನೂ ಸೆಳೆಯುವ ಶಕ್ತಿ ಇರುವುದರಿಂದ ಜಿಟಿಡಿ ಮಗನೇ ಸೂಕ್ತ ಅಭ್ಯರ್ಥಿ ಎಂದು ತಿಳಿಯಲಾಗಿದೆ.
ಬಿಜೆಪಿಯ ಕೆಲ ನಾಯಕರು ಈ ಬಗ್ಗೆ ಜಿಟಿಡಿ ಜೊತೆ ಚರ್ಚೆ ನಡೆಸಿದ್ದಾರೆ. ಆದರೆ ಜಿಟಿಡಿ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ, ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಮಾತಾಡಿ ಕಳುಹಿಸಿದ್ದಾರೆ. ಅನರ್ಹ ಶಾಸಕರ ಅರ್ಜಿ ಕುರಿತು ಸುಪ್ರೀಂಕೋರ್ಟ್ ಏನು ತೀರ್ಪು ನೀಡುತ್ತದೆ ಎನ್ನುವುದರ ಮೇಲೆ ಜಿಟಿಡಿ ನಿರ್ಧಾರ ನಿಂತಿದೆ ಎಂದು ಹೇಳಲಾಗುತ್ತಿದೆ.

Comments
Post a Comment