ರಾಜ್ಯಗಳ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಎರಡು ಸ್ಥಾನಗಳು ಬಿಜೆಪಿ ಪಾಲಾಗಿದ್ದರೆ, ತಲಾ ಒಂದೊಂದು ಸ್ಥಾನಗಳನ್ನು ಕಾಂಗ್ರೆಸ್ ಹಾಗೂ ಸಿಪಿಎಂ ಪಡೆದಿವೆ. ಉತ್ತರಪ್ರದೇಶ ಮತ್ತು ತ್ರಿಪುರಾಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸಿದ್ದರೆ, ಕೇರಳದಲ್ಲಿ ಆಡಳಿತಾರೂಢ ಎಲ್ಡಿಎಫ್ ಮತ್ತು ಛತ್ತೀಸ್ಗಡದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ವಿಜಯ ಪತಾಕೆ ಹಾರಿಸಿದ್ದಾರೆ.
ಉತ್ತರಪ್ರದೇಶದ ಹಮೀರ್ಪುರ ಕ್ಷೇತ್ರದಲ್ಲಿ ಬಿಜೆಪಿಯ ಯುವರಾಜ್ ಸಿಂಗ್ 17,846 ಮತಗಳಿಂದ ಎಸ್ಪಿ ಅಭ್ಯರ್ಥಿ ಮನೋಜ್ ಪ್ರಜಾಪತಿಯನ್ನು ಸೋಲಿಸಿದ್ದಾರೆ. ತ್ರಿಪುರಾದ ಬಧಾರ್ಘಾಟ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಿಮಿ ಮಜುಂದಾರ್ ಅವರು ಪ್ರತಿಸ್ಪರ್ಧಿ ಸಿಪಿಎಂನ ಬುಲ್ತಿ ಬಿಸ್ವಾಸ್ ವಿರುದ್ಧ ಜಯ ಸಾಧಿಸಿದ್ದಾರೆ.
ಛತ್ತೀಸ್ಗಡದ ನಕ್ಸಲ್ ಪೀಡಿತ ದಂತೇವಾಡದಲ್ಲಿ ಕಾಂಗ್ರೆಸ್ನ ದೇವತಿ ಕರ್ಮಾ ಅವರು ಬಿಜೆಪಿ ಅಭ್ಯರ್ಥಿ ಓಜಸ್ವಿಯವರನ್ನು ಸೋಲಿಸಿದ್ದಾರೆ.
5 ದಶಕಗಳ ಬಳಿಕ ಎಡಕ್ಕೆ ವಾಲಿದ ಪಾಲಾ: ಕೇರಳದ ಪಾಲಾ ಕ್ಷೇತ್ರದಲ್ಲಿ ಎಲ್ಡಿಎಫ್ ಅಭ್ಯರ್ಥಿ ಮಣಿ ಸಿ. ಕಪ್ಪನ್ ಅವರು ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿ ಜೋಸ್ ಟಾಮ್ ಪುಲಿಕ್ಕುನ್ನೆಲ್ ಅವರನ್ನು ಕೇವಲ 2,943 ಮತಗಳ ಅಂತರದಿಂದ ಸೋಲಿಸಿದ್ದಾರೆ. ಯುಡಿಎಫ್ ನಾಯಕ, ಮಾಜಿ ವಿತ್ತ ಸಚಿವ ಕೆ.ಎಂ.ಮಣಿ ಅವರ ನಿಧನದಿಂದ ಈ ಕ್ಷೇತ್ರ ತೆರವಾಗಿತ್ತು. ಬರೋಬ್ಬರಿ 50 ವರ್ಷಗಳಿಂದಲೂ ಪಾಲಾ ಕ್ಷೇತ್ರವು ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು. ಆದರೆ, ಈಗ ಆ ಕೋಟೆಯನ್ನು ಛಿದ್ರಗೊಳಿಸುವಲ್ಲಿ ಸಿಪಿಎಂ ಯಶಸ್ವಿಯಾಗಿದೆ.

Comments
Post a Comment