ಕಾಶ್ಮೀರ ಗಡಿಯಲ್ಲಿನ ಗುಂಡಿನ ಕದನದ ಬಳಿಕ ರಾಜಕಾರಣ ಮತ್ತೆ ಲೋಕಸಭೆ ಚುನಾವಣೆಯತ್ತ ಹೊರಳಿದೆ. ಸರ್ಜಿಕಲ್ ದಾಳಿ ಬಳಿಕ ಮತ್ತಷ್ಟು ಆತ್ಮವಿಶ್ವಾಸದಿಂದ ಬೀಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಬುಧವಾರ ಇದೇ ಹುಮ್ಮಸ್ಸಿನೊಂದಿಗೆ ಕಾಂಗ್ರೆಸ್ನ ಭದ್ರಕೋಟೆ ಕಲಬುರಗಿಗೆ ಕಾಲಿಡುತ್ತಿದ್ದಾರೆ. ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ಕಾಂಗ್ರೆಸ್ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತೊಡೆತಟ್ಟಲಿದ್ದಾರೆ. ಕಾಂಗ್ರೆಸ್ನಿಂದ ಹೊರಬಂದಿರುವ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಬಿಜೆಪಿ ಸೇರ್ಪಡೆಗೂ ಸಮಾವೇಶ ವೇದಿಕೆ ಆಗಲಿದೆ. ಮತ್ತೊಂದೆಡೆ ಜೆಡಿಎಸ್-ಕಾಂಗ್ರೆಸ್ ನಡುವಿನ ಲೋಕಸಭಾ ಸೀಟು ಹಂಚಿಕೆ ಕಗ್ಗಂಟು ತೀವ್ರಗೊಂಡಿದ್ದು, ಮಂಡ್ಯದ ಬಳಿಕ ಮೈಸೂರಿಗಾಗಿಯೂ ಪೈಪೋಟಿ ಶುರುವಾಗಿದೆ.
ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕ್ಷೇತ್ರದಿಂದಲೇ ಮೋದಿ ರಾಜ್ಯ ಪ್ರವಾಸ ಆರಂಭಿಸುತ್ತಿರುವುದು ವಿಶೇಷ. ಉಮೇಶ್ ಜಾಧವ್ ಪ್ರಧಾನಿ ಸಮ್ಮುಖದಲ್ಲೇ ಬಿಜೆಪಿ ಸೇರಲಿದ್ದು, ಚುನಾವಣೆಯಲ್ಲಿ ಅವರನ್ನೇ ಖರ್ಗೆ ಎದುರು ಹೂಡುವ ಘೋಷಣೆಯಾಗಲಿದೆ.

Comments
Post a Comment